Monday, April 29, 2024

ಯುವ ಮತದಾರರಿಗಾಗಿ ಮತದಾನ ಜಾಗೃತಿ ಕಾರ್ಯಕ್ರಮ

ಭಟ್ಕಳ: "ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಮುಖ ಪ್ರಕ್ರಿಯೆಯಾಗಿದ್ದು ಎಲ್ಲರೂ ತಪ್ಪದೆ ಮತದಾನ ಮಾಡಬೇಕು" ಎಂದು ಖ್ಯಾತ ಹೈಕೋರ್ಟ್ ನ್ಯಾಯವಾದಿ ರವೀಂದ್ರ ಜಿ ಕೊಲ್ಲೆ ಹೇಳಿದರು. ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯ ಮತ್ತು ಚುನಾವಣಾ ಸಾಕ್ಷರತಾ ಕ್ಲಬ್ ಸಹಭಾಗಿತ್ವದಲ್ಲಿ ಆಯೋಜಿಸಲ್ಪಟ್ಟ ಯುವ ಮತದಾರರಿಗಾಗಿ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, "ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಮತದಾನವು ನಮಗೆ ಸಂವಿಧಾನ ನೀಡಿರುವ ವಿಶೇಷ ಹಕ್ಕಾಗಿದ್ದು, ಈ ಹಕ್ಕನ್ನು ಕಡ್ಡಾಯವಾಗಿ ಮತ್ತು ಜವಾಬ್ದಾರಿಯುತವಾಗಿ ಚಲಾಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ" ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ್ ಮತ್ತು ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಮತದಾರರಿಗೆ ಶುಭ ಹಾರೈಸಿದರು. 

ಕಾಲೇಜಿನ ವಿದ್ಯಾರ್ಥಿಗಳು 2023-24 ನೇ ಸಾಲಿನಲ್ಲಿ ಈ ವರೆಗೆ ಸುಮಾರು 3.5 ಲಕ್ಷಕ್ಕಿಂತ ಅಧಿಕ ಮೊತ್ತದ ವಿವಿಧ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿದ್ದು, ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರಮಾಣಪತ್ರ ವಿತರಿಸಲಾಯಿತು. 

ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿದರು, ಉಪ ಪ್ರಾಂಶುಪಾಲ ಫಣಿಯಪ್ಪಯ್ಯ ಹೆಬ್ಬಾರ್ ಮತದಾರರ ಪ್ರತಿಜ್ಞಾ ವಿಧಿ ಭೋಧಿಸಿದರು. ಉಪನ್ಯಾಸಕರುಗಳಾದ ನಾಗರಾಜ್ ನಾಯ್ಕ್ ಮತ್ತು ದೇವೇಂದ್ರ ಕಿಣಿ ನಿರೂಪಿಸಿ ವಂದಿಸಿದರು.   

No comments:

Post a Comment