ಭಟ್ಕಳ: ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2024-25ನೇ ಸಾಲಿನ ವಾರ್ಷಿಕೋತ್ಸವವು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾದ ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಗಣೇಶ ಭಟ್ಟ " ಶೃದ್ಧೆಯಿಂದ ಸತತವಾಗಿ ಪ್ರಯತ್ನಿಸಿದಾಗ ಯಾವುದೇ ಗುರಿಯನ್ನು ತಲುಪಬಹುದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಿ ಯಶಸ್ಸನ್ನು ಪಡೆಯಲಿ" ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ವೀರ ಚಂದ್ರಹಾಸ ಚಲನಚಿತ್ರದ ನಟರಾದ ಪ್ರಸನ್ನ ಶೆಟ್ಟಿಗಾರ ಮಾತನಾಡಿ "ಬದುಕಿನಲ್ಲಿ ಚಿಂತಿಸದೇ, ಬಂದ ಅವಕಾಶಗಳನ್ನು ಸ್ವೀಕರಿಸಿ ಹಾಗೂ ಆ ಕುರಿತು ಚಿಂತಿಸಿ, ಆಗಲೇ ಅತ್ಯುತ್ತಮ ಸಾಧನೆಗೈಯಲು ಸಾಧ್ಯ" ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕುಮಟಾದ ರೆವೆನ್ಯೂ ಅಧಿಕಾರಿ, ಕಾಲೇಜಿನ ಬಿಎ ವಿಭಾಗದ ಪೂರ್ವ ವಿದ್ಯಾರ್ಥಿ ವೆಂಕಟೇಶ ಮಾತನಾಡಿ "ಕಾಲೇಜಿನಲ್ಲಿ ತಾವು ಕಳೆದ ದಿನಗಳನ್ನು ಸ್ಮರಿಸುತ್ತ, ತನ್ನ ಯಶಸ್ಸಿನಲ್ಲಿ ಕಾಲೇಜಿನ ಪಾತ್ರ ಬಹುಮುಖ್ಯ, ಕಾಲೇಜಿಗೆ ಸದಾ ಋಣಿಯಾಗಿರುವೆ" ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷ ಡಾ. ಸುರೇಶ ನಾಯಕ "ಮೂರು ವರ್ಷದ ಪದವಿಯಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಂಡು ಉದ್ಯೋಗವಂತರಾಗಬೇಕು" ಎಂದು ಹೇಳಿದರು.
ಭಟ್ಕಳ ಎಜುಕೇಶನ್ ಟ್ರಸ್ಟ'ನ ಟ್ರಸ್ಟಿ ನಾಗೇಶ ಭಟ್ಟ ಇವರು ಬಿಎ ಪತ್ರಿಕೋದ್ಯಮ ವಿಭಾಗದವರು ರಚಿಸಿದ ಎಸ್.ಜಿ.ಎಸ್ ಸಮೃದ್ಧಿ ಪತ್ರಿಕೆಯ ೩ನೇ ಸಂಚಿಕೆಯನ್ನು ಆನಾವರಣಗೊಳಿಸಿದರು.
೨೦೨೪-೨೫ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪಠ್ಯ ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರಾಂಶುಪಾಲರಾದ ಶ್ರೀನಾಥ ಪೈ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಹಾಗೂ ಬಿ.ಬಿ.ಎ-ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಪರಿಚಯಿಸಿದರೆ, ಉಪನ್ಯಾಸಕ ಸುಬ್ರಮ್ಹಣ್ಯ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ದಿಕ್ಸಿತಾ ಹಾಗೂ ನೇಹಾ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
No comments:
Post a Comment